ನಾಲ್ಕು ಭಾಷೆಗಳಲ್ಲಿ ಜೀ ಸ್ಟೂಡಿಯೋಸ್ ಜೊತೆಗೆ ರಾಕ್ಲೈನ್ ವೆಂಕಟೇಶ್ ಜಂಟಿ ನಿರ್ಮಾಣ
ಇತ್ತೀಚಿನ ದಿನಗಳಲ್ಲಿ ತಮಿಳಿನಲ್ಲಿ ‘ಲಿಂಗ’ ಮತ್ತು ಹಿಂದಿಯಲ್ಲಿ ‘ಭಜರಂಗಿ ಭಾಯಿಜಾನ್’ನಂತಹ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿದ್ದ ರಾಕ್ಲೈನ್ ವೆಂಕಟೇಶ್, ಈಗ ಮರಾಠಿಯ ಬ್ಲಾಕ್ಬಸ್ಟರ್ ‘ಸಾಯ್ರತ್’ ಚಿತ್ರವನ್ನು ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ಕುರಿತು, ಶನಿವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ, ಬಿಡುಗಡೆಯಾದ ೪೦ ದಿನಗಳ ಹೊತ್ತಿಗೆ ೧೦೦ಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿರುವ ‘ಸಾಯ್ರತ್’ ಚಿತ್ರದ ಸಂತೋಷವನ್ನು ಹಂಚಿಕೊಳ್ಳಲು ಚಿತ್ರತಂಡವು, ಮುಂಬೈನ ಟ್ರೈಡೆಂಟ್ ಹೋಟೆಲ್ನಲ್ಲಿ ಸಂತೋಷ ಕೂಟವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಆ ಚಿತ್ರ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಿಗೆ ರೀಮೇಕ್ ಆಗುತ್ತಿರುವ ಮತ್ತು ಜೀ ಸ್ಟುಡಿಯೋ ಜೊತೆಗೆ ರಾಕ್ಲೈನ್ ವೆಂಕಟೇಶ್ ಸಹ ನಿರ್ಮಾಣ ಮಾಡುತ್ತಿರುವ ವಿಷಯವನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ನಟ-ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಹ ಹಾಜರಿದ್ದು, ಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು.
‘ಇತ್ತೀಚೆಗೆ ‘ಸಾಯ್ರತ್’ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಚಿತ್ರ ನನ್ನ ಮನಸ್ಸು ಮುಟ್ಟಿತು. ಆಗಲೇ ಈ ಚಿತ್ರವನ್ನು ರೀಮೇಕ್ ಮಾಡುವ ನಿರ್ಧಾರ ತೆಗೆದುಕೊಂಡೆ. ಮರಾಠಿ ಚಿತ್ರವನ್ನು ನಿರ್ಮಿಸಿರುವ ಜೀ ಸ್ಟುಡಿಯೋದವರನ್ನು ಈ ಸಂಬಂಧ ಭೇಟಿ ಮಾಡಿ, ಚಿತ್ರದ ರೀಮೇಕ್ ಹಕ್ಕುಗಳನ್ನು ಕೊಡುವುದಕ್ಕೆ ಕೇಳಿದಾಗ, ಅವರು ತಾವೇ ಈ ಚಿತ್ರವನ್ನು ದಕ್ಷಿಣದ ಭಾಷೆಗಳಲ್ಲಿ ನಿರ್ಮಿಸುವುದಾಗಿ ಹೇಳಿದರು. ಬೇಕಾದರೆ ಅವರ ಜೊತೆಗೆ ಜಂಟಿ ನಿರ್ಮಾಣ ಮಾಡಬಹುದೆಂದರು. ನಾನು ಇದುವರೆಗೂ ಜಂಟಿ ನಿರ್ಮಾಣದಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಹಾಗೆಯೇ ಈ ಚಿತ್ರವನ್ನು ಬಿಡುವ ಮನಸ್ಸಿರಲಿಲ್ಲ. ಹಾಗಾಗಿ ಜೀ ಸ್ಟುಡಿಯೋಸ್ನವರ ಜೊತೆಗೆ ಸೇರಿಕೊಂಡು, ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಿಸುತ್ತಿzನೆ. ಈ ಪೈಕಿ ತೆಲುಗು ಚಿತ್ರ ಮೊದಲು ಶುರುವಾಗಲಿದೆ. ಮರಾಠಿ ಚಿತ್ರವನ್ನು ನಿರ್ದೇಶಿಸಿದ್ದ ನಾಗರಾಜ್ ಮಂಜುಳೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಂತರದ ದಿನಗಳಲ್ಲಿ ಬೇರೆ ಭಾಷೆಗಳ ಇದೇ ಚಿತ್ರವನ್ನು ಮಾಡಲಿzವೆ’ ಎಂದು ಹೇಳಿದರು.
‘ಸಾಯ್ರತ್’ ಚಿತ್ರದಲ್ಲಿ ರಿಂಕು ರಾಜಗುರು, ಆಕಾಶ್ ತೋಸರ್, ತಾನಾಜಿ, ಅರ್ಬಾಜ್ ಶೇಖ್, ಛಾಯಾ ಕದಂ ಮುಂತಾದವರು ಅಭಿನಯಿಸಿದ್ದು, ನಾಗರಾಜ್ ಮಂಜುಳೆ ಅವರು ಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಿತಿನ್ ಖೇಣಿ, ನಿಖಿಲ್ ಸಾಣೆ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಅವರ ಸಂಗೀತವಿದೆ.